ಸೆಪ್ಟೆಂಬರ್ 8ರಂದು ಸರ್ಕಾರಿ ರಜೆ ಘೋಷಣೆಗೆ ಕ್ರೈಸ್ತ ಸಂಘಟನೆಯ ಮನವಿ

ಬೆಂಗಳೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಮರಿಯ ಜಯಂತಿ/ಕೊಯ್ಲು ಹಬ್ಬದ ಅಂಗವಾಗಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವಂತೆ ಕರ್ನಾಟಕ ಕ್ರೈಸ್ತ ಸಂಘಟನೆ (ರಿ) ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಸಂಘಟನೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಅವರು ಆರೋಗ್ಯ, ಕುಟುಂಬ ಕಲ್ಯಾಣ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖಾ ಸಚಿವರಾದ ಡಾ. ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿ, ಸೆಪ್ಟೆಂಬರ್ 8ರಂದು ಕ್ರೈಸ್ತ ಸಮುದಾಯಕ್ಕೆ ವಿಶೇಷ ಮಹತ್ವವಿರುವ ದಿನವಾಗಿದ್ದು, ಈ ದಿನವನ್ನು ಸರ್ಕಾರಿ ರಜಾ ದಿನವನ್ನಾಗಿ ಘೋಷಿಸುವಂತೆ ಕೋರಿದ್ದಾರೆ.
ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಜಾತಿ, ಮತ, ಭೇದವಿಲ್ಲದೆ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಘಟನೆಯೊಂದಿಗೆ ಸುಮಾರು 50,000ಕ್ಕೂ ಹೆಚ್ಚು ಮಂದಿ ಸಂಪರ್ಕ ಹೊಂದಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 8ರ ಮಹತ್ವ
ಪ್ರತಿ ವರ್ಷ ಸೆಪ್ಟೆಂಬರ್ 8ರಂದು ದೇವಮಾತೆ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಕ್ರೈಸ್ತ ಸಮುದಾಯವು ವಿಶೇಷವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಹೊರರಾಜ್ಯ ಹಾಗೂ ದೇಶಗಳಿಂದಲೂ ಭಕ್ತರು ಆಗಮಿಸಿ, ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೊಸ ಫಸಲನ್ನು ದೇವರಿಗೆ ಅರ್ಪಿಸುವ ಸಂಪ್ರದಾಯದ ಜೊತೆಗೆ ಕುಟುಂಬಸ್ಥರು ಹಾಗೂ ಬಂಧು-ಬಳಗದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಸಂಘಟನೆ ತಿಳಿಸಿದೆ.
ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 8ರ ಮರಿಯ ಜಯಂತಿ/ಕೊಯ್ಲು ಹಬ್ಬಕ್ಕೆ ಸರ್ಕಾರಿ ರಜೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ಬೇಡಿಕೆಯನ್ನು ಸರ್ಕಾರವು ಸಕಾರಾತ್ಮಕವಾಗಿ ಪರಿಗಣಿಸಿ, ಕ್ರೈಸ್ತ ಸಮುದಾಯದ ಬಹುಕಾಲದ ಮನವಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಮನವಿ ಮಾಡಿದೆ.
ಸಂಘಟನೆಯ ಸೇವಾ ಕಾರ್ಯಗಳಿಗೆ ಸರ್ಕಾರದಿಂದ ದೊರೆತಿರುವ ಪ್ರೋತ್ಸಾಹ ಮತ್ತು ಸಹಕಾರಕ್ಕಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿರುವ ಸ್ಟ್ಯಾನಿ ಪಿಂಟೋ, ಈ ಬೇಡಿಕೆಯನ್ನೂ ಸರ್ಕಾರ ಮಾನವೀಯ ಹಾಗೂ ಸಕಾರಾತ್ಮಕ ದೃಷ್ಟಿಕೋನದಿಂದ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿಗಾರರು
ಜಾನ್ಸನ್ ಕೊಡಗು
Live Cricket Info






