ಸುದ್ದಿ

ನಗರದಲ್ಲಿ ಜೆಸಿಬಿ ಘರ್ಜನೆ: 19 ಅಪಾರ್ಟ್ ಮೆಂಟ್ ಗಳ ಅನಧಿಕೃತ ಮಹಡಿ ತೆರವಿಗೆ ಬಿಬಿಎಂಪಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆ ನೀರು ಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡು ಒಂದು ವರ್ಷದಿಂದ ಕೆಲಸವಿಲ್ಲದೆ ಕುಳಿತಿದ್ದ ಬುಲ್ಡೋಜರ್‌ಗಳು ಮತ್ತೆ ಘರ್ಜಿಸುವ ಸಾಧ್ಯತೆಯಿದೆ.

ಏಕೆಂದರೆ ಪಾಲಿಕೆಯು ಅಪಾರ್ಟ್‌ಮೆಂಟ್‌ಗಳಲ್ಲಿನ ಅನಧಿಕೃತ ಮಹಡಿಗಳನ್ನು (ಫ್ಲಾಟ್‌ಗಳು) ತೆರವುಗೊಳಿಸಲು ಟೆಂಡರ್ ಆಹ್ವಾನಿಸಿದೆ. ದಾಖಲೆಗಳ ಪ್ರಕಾರ, ಅಂತಹ 19 ಬಹುಮಹಡಿ ಕಟ್ಟಡಗಳು ಕ್ರಮ ಎದುರಿಸುವ ಸಾಧ್ಯತೆಯಿದೆ. ಮಹದೇವಪುರ ವಲಯದಲ್ಲಿನ ಅಕ್ರಮ ಕಟ್ಟಡಗಳ ತನಿಖೆಯ ಸಂದರ್ಭದಲ್ಲಿ ಬಿಬಿಎಂಪಿ, ಬಿಲ್ಡರ್‌ಗಳಿಗೆ ನೋಟಿಸ್‌ಗಳನ್ನು ನೀಡಿದ್ದರೂ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಮುಂದಾಗಿರುವುದು ಕಂಡುಬಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ಸಿಕ್ಕಿರುವ ದಾಖಲೆಗಳು ತೋರಿಸುತ್ತವೆ.

ಕೆಲವು ಸಂದರ್ಭಗಳಲ್ಲಿ, ಬಿಲ್ಡರ್‌ಗಳು ಅನುಮೋದಿತ ಯೋಜನೆಗಳಿಂದ ಶೇ. ನೂರರಷ್ಟು ಬದಲಾವಣೆ ಮಾಡಿದ್ದಾರೆ. “19 ಕಟ್ಟಡಗಳ ಪೈಕಿ ಆರು ಕಟ್ಟಡಗಳ ಅನಧಿಕೃತ ಮಹಡಿಗಳನ್ನು ತೆಗೆದುಹಾಕಲು ಟೆಂಡರ್ ಅಧಿಸೂಚನೆಯು ಎರಡನೇ ಬಾರಿಗೆ ನಡೆಯುತ್ತಿದೆ. ಟೆಂಡರ್‌ನಲ್ಲಿ ಯಾರೂ ಭಾಗವಹಿಸದಿದ್ದರೆ ಪಾಲಿಕೆ ತಾನಾಗಿಯೇ ಕ್ರಮ ಕೈಗೊಳ್ಳಬೇಕೋ ಅಥವಾ ಮತ್ತೊಮ್ಮೆ ಟೆಂಡರ್‌ ಕರೆಯಬೇಕೋ ಎಂಬುದನ್ನು ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ನಿರ್ಧರಿಸುತ್ತಾರೆ ಎಂದು ಕೆಆರ್‌ ಪುರಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ವೇತಾ ತಿಳಿಸಿದ್ದಾರೆ.

ಬಿಲ್ಡರ್‌ಗಳು ಜಿ+3 ಪ್ಲಾನ್‌ನಲ್ಲಿ ನಾಲ್ಕು ಮನೆಗಳನ್ನು ತೋರಿಸುತ್ತಾರೆ, ಆದರೆ 35 ಕ್ಕೂ ಹೆಚ್ಚು ವಸತಿಗಳೊಂದಿಗೆ ಐದರಿಂದ ಆರು ಮಹಡಿಗಳನ್ನು ಸೇರಿಸುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಉದಾಹರಣೆಗೆ ಸಾಯಿ ಸುಪ್ರಿಯಾ ವೆಂಚರ್ಸ್ – ಬಸವನಪುರ ವಾರ್ಡ್‌ನ ಸಾಯಿ ಸೆರಿನಿಟಿ ಲೇಔಟ್‌ನ 1 ನೇ ಕ್ರಾಸ್ ಯಮುನಾ-ಕೃಷ್ಣ ರಸ್ತೆಯಲ್ಲಿರುವ ಹ್ಯಾಪಿ ನೆಸ್ಟ್.

ಇದು 1 BHK ಮತ್ತು ಗ್ರೌಂಡ್-ಪ್ಲಸ್ ಮೂರು ಮಹಡಿಗಳ 30 ಫ್ಲಾಟ್ ಗಳಿಗೆ ಅನುಮೋದನೆ ಪಡೆದಿದೆ. ಆದರೆ ಪ್ಲಾನ್ ಗೆ ವಿರುದ್ಧವಾಗಿ, ಆರೂವರೆ ಮಹಡಿಗಳಲ್ಲಿ 48 ಫ್ಲಾಟ್ ಗಳನ್ನು ನಿರ್ಮಿಸಿದೆ. ಜೊತೆಗೆ ಅಗತ್ಯವಿರುವ ಕಾರ್ ಪಾರ್ಕಿಂಗ್ ಮುಂತಾದ ಸೌಲಭ್ಯಗಳಿಲ್ಲ ಎಂದು ಬಿಬಿಎಂಪಿ ಎಂಜಿನಿಯರ್ ತಿಳಿಸಿದ್ದಾರೆ. ಜಿ+3ಗೆ ಅನುಮತಿ ನೀಡಲಾಗಿದ್ದು, ಅದೇ ಬಡಾವಣೆಯಲ್ಲಿ ಎಸ್‌ಎಲ್‌ಎನ್‌ ಕನ್‌ಸ್ಟ್ರಕ್ಷನ್ಸ್‌ನ ಕಟ್ಟಡ ಸಂಖ್ಯೆ 9/2 ‘ಧ್ರುವ ಹೋಮ್ಸ್’ ವಿರುದ್ಧ ಕೆಡವಲು ಆದೇಶವನ್ನೂ ಹೊರಡಿಸಲಾಗಿದೆ. ಮಾಲೀಕರು ಯೋಜನೆಯಲ್ಲಿ ನಾಲ್ಕು ಮನೆಗಳನ್ನು ತೋರಿಸಿದ್ದರು, ಆದರೆ ಈಗ 25 ನಿವೇಶನಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

ಕೃಷ್ಣ-ಯಮುನಾ ರಸ್ತೆಯಲ್ಲಿರುವ ಸ್ಕೈರಾ ಲೇಕ್ ವ್ಯೂ ಅಪಾರ್ಟ್‌ಮೆಂಟ್ ನ ಒಂದು ಮಹಡಿ ಕೆಡವಲು ಆದೇಶವನ್ನು ನೀಡಲಾಗಿದೆ. ಗ್ರೌಂಡ್ ಪ್ಲಸ್ ಮೂರು ಮಹಡಿಗಳಿಗೆ ಅನುಮತಿ ನೀಡಲಾಗಿತ್ತು, ಆದರೆ ಬಿಲ್ಡರ್ 25 ಮನೆಗಳಿರುವ ಆರು ಮಹಡಿಗಳನ್ನು ನಿರ್ಮಿಸಿದ್ದಾರೆ. ಇಲ್ಲಿಯೂ ಕೂಡ ಅಗತ್ಯವಾದ ಕಾರ್ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದು ಬಿಬಿಎಂಪಿ ಎಂಜಿನಿಯರ್ ಹೇಳಿದರು. ನಗರ ಯೋಜನೆ ಸಹಾಯಕ ನಿರ್ದೇಶಕರು ಮತ್ತು ವಾರ್ಡ್ ಎಂಜಿನಿಯರ್‌ಗಳ ವೈಫಲ್ಯದಿಂದಾಗಿ ಬಿಲ್ಡರ್‌ಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಅಧಿಕಾರಿಗಳು ಕೇವಲ ಅನುಮೋದನೆಗಳು / ಸೂಚನೆಗಳನ್ನು ನೀಡಿ ನಂತರ ಮೌನವಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

Naveen Kumar

Managing Editor

Related Articles

Leave a Reply

Your email address will not be published. Required fields are marked *

Back to top button