ಮಂಗಳೂರು| ಬಾಲಕನ ಎದೆಯಾಳಕ್ಕೆ ಹೊಕ್ಕಿದ್ದ ತೆಂಗಿನ ಗರಿ, ಚೈನ್ ಯಶಸ್ವಿಯಾಗಿ ಹೊರ ತೆಗೆದ ಸರ್ಕಾರಿ ವೈದ್ಯರು
ಮಂಗಳೂರು: ಅವಘಡವೊಂದರಲ್ಲಿ 12 ವರ್ಷದ ಬಾಲಕನ ಎದೆಯಲ್ಲಿ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಸರವನ್ನು ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಾ. ಸುರೇಶ್ ಪೈ ನೇತೃತ್ವದ ತಂಡ ಬಾಲಕನ ಜೀವ ಉಳಿಸಿದೆ.ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಅಸ್ಸಾಂ ಮೂಲದ ಕಾರ್ಮಿಕ ಕುಟುಂಬ ಮಡಿಕೇರಿಯಲ್ಲಿ ವಾಸವಿಗಿದೆ. ಶನಿವಾರ ಸಂಜೆ ಬಾಲಕ ಕಮಲ್ ಹಸನ್ ಆಟವಾಡುತ್ತಿದ್ದಾಗ ತೆಂಗಿನ ಗರಿಯ ಭಾಗವೊಂದು ಆತನ ಮೇಲೆ ಬಿದ್ದಿತು. ಬಾಲಕನ ಕುತ್ತಿಗೆಯಲ್ಲಿದ್ದ ಸರದ ಜೊತೆಗೆ ತೆಂಗಿನ ಗರಿಯೂ ಎದೆಯ ಭಾಗದಲ್ಲಿ ಸಿಲುಕಿಕೊಂಡಿತ್ತು. ಕೂಡಲೇ ಪೋಷಕರು ಬಾಲಕನನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಬಾಲಕನನ್ನು ಮಡಿಕೇರಿಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ರವಾನೆ ಮಾಡಲಾಯಿತು.ಕೂಡಲೇ ಸಿದ್ದವಾದ ಆಸ್ಪತ್ರೆ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ಸಂಪೂರ್ಣ ತಂಡವು ಡಾ. ಸುರೇಶ್ ಪೂ ನೇತೃತ್ವದಲ್ಲಿ ಮಧ್ಯರಾತ್ರಿ 1:30 ರಿಂದ 3:30 ರ ನಡುವೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ಗರಿ ಮತ್ತು ಸರವನ್ನು ಯಶಸ್ವಿಯಾಗಿ ಹೊರತೆಗೆದಿದೆ.ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದು, ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸರ್ಕಾರಿ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.