ಮಂಗಳೂರು :ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ
ಮಂಗಳೂರು : ಕಡಬ ತಾಲೂಕಿನ ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.8ರಂದು ಸಂಜೆ ಸುಮಾರು 6.30 ಗಂಟೆಗೆ ಆರಿಫ್ ಅವರ ತಂಗಿ ಮನೆಗೆ ಬೀಗ ಹಾಕಿ, ತಂಗಿ ಆರೀಫ್, ತಂದೆ ಸುಲೈಮಾನ್, ತಾಯಿ ತಮ್ಮ ಆಸೀಫ್ ನೊಂದಿಗೆ ಬೈತ್ತಡ್ಕ ಮಸೀದಿಯ ವಾರ್ಷಿಕ ಸ್ವಲಾತ್ ಕಾರ್ಯಕ್ರಮಕ್ಕೆ ತೆರಳಿ, ಬಳಿಕ ರಾತ್ರಿ ಸುಮಾರು 10.30 ಗಂಟೆಗೆ ಸ್ವಲಾತ್ ಕಾರ್ಯಕ್ರಮದಿಂದ ಆರೀಫ್ ಅವರ ತಂದೆ,ತಾಯಿ, ತಂಗಿ ಹೊರಟು ಬಂದು ಆರೀಫ್ ಅವರ ತಮ್ಮ ಆಸೀಫ್ ಎಂಬವರ ಮನೆಯಲ್ಲಿ ಮಲಗಿದ್ದರು.ರಾತ್ರಿ ಸುಮಾರು 1 ಗಂಟೆಗೆ ಆರೀಫ್ ಅವರು ಸ್ವಲಾತ್ ಕಾರ್ಯಕ್ರಮದಿಂದ ಹೊರಟು ಬಂದು ಅವರ ಮನೆಯಲ್ಲಿ ಮಲಗಿದ್ದರು. ಫೆ.9ರಂದು ಮಧ್ಯಾಹ್ನ ತಂಗಿ ಜೊತೆಯಲ್ಲಿ ಮನೆಗೆ ಹೋದಾಗ, ಮನೆಯ ಮುಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಯಾರೋ ತೆರೆಯಲು ಪ್ರಯತ್ನಿಸಿರುವುದಲ್ಲದೇ, ಮನೆಯ ಹಿಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಬಲವಂತವಾಗಿ ತೆರೆದಿರುವುದು ಕಂಡು ಬಂದಿದೆ.ಮನೆಯೊಳಗೆ ತೆರಳಿ ನೋಡಿದಾಗ ಮನೆಯೊಳಗಿನ 2 ಬೆಡ್ ರೂಮ್ ಗಳಲ್ಲಿದ್ದ ಕಪಾಟನ್ನು ತೆರೆದು, ಅದರೊಳಗಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನೊಳಗಿದ್ದ ಸುಮಾರು 1,43,೦೦೦/- ಮೌಲ್ಯದ ಸೊತ್ತುಗಳನ್ನು ಯಾರೋ ಕಳವು ಮಾಡಿರುವುದು ಬೆಳಕಿಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗುಂಡಿನಾರು ನಿವಾಸಿ ಮೊಹಮ್ಮದ್ ಆರಿಫ್ ಅವರು ಈ ಕುರಿತು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕಲಂ 331(3) 331(4) 305 ಬಿ. ಎನ್.ಎಸ್. 2023 ಯಂತೆ ಪ್ರಕರಣ (ಅ.ಕ್ರ.08/25) ದಾಖಲಾಗಿದೆ.